Thursday, January 20, 2011

ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ?

ಹೊಸ ವರ್ಷನ ತುಂಬು ಹೃದಯದಿಂದ ಸ್ವಾಗತಿಸಿದ್ದಾಯ್ತು, ಸಂಕ್ರಮಣದ ಎಳ್ಳು-ಬೆಲ್ಲಾನು ಸವಿದದ್ದಾಯ್ತು. ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡು ಅನ್ನೋದು ವಾಡಿಕೆ. ಆದ್ರೆ ಈ ವರ್ಷದ ಮೊದಲ ಬ್ಲಾಗನ್ನ ಸ್ವಲ್ಪ ಖಾರದ ಹಾಗು ಅಷ್ಟೇ ನೋವಿನ ವಿಷಯದೊಂದಿಗೆ ಶುರು ಮಾಡ್ಬೇಕಾಗಿಬಂದಿದೆ. 
ನನ್ನ ಕಳೆದ ಕೆಲವು ಬ್ಲಾಗಗಳಲ್ಲಿ ನಮ್ಮ ವೃತ್ತಿಯ ಸುಂದರ ಮುಖದ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದೆ. ಆದ್ರೆ ಅದರ ಇನ್ನೊಂದು ಬದಿಯಲ್ಲಿ ಇರೋ ನೋವು, ಹತಾಶೆಯ ಮುಖ ಹೊರಗಿನ ಪ್ರಪಂಚಕ್ಕೆ ಕಾಣೋದೆ ಇಲ್ಲ. ಯಾಕಂದ್ರೆ ಎಲ್ಲ ವಿಷಯಗಳನ್ನ ನಾಟಕೀಯವಾಗಿ ಬಣ್ಣಿಸೋ ಹಾಗು ಅದೇ ರೀತಿಯಲ್ಲಿ ಸ್ವೀಕರಿಸೋ ದೃಷ್ಟಿಕೋನ ನಮ್ಮ ಜನಗಳದ್ದು. ಯಾವುದೇ ಸಿನಿಮಾದಲ್ಲಿ ನೋಡಿದರೂನು ಡಾಕ್ಟರ್ ಅಂದ್ರೆ ಒಂದು ಮೆಕ್ಯಾನಿಕಲ್ ಯಂತ್ರ ಅನ್ನೋ ಹಾಗೆ ಪಾತ್ರ ಸೃಷ್ಟಿ ಮಾಡಿರ್ತಾರೆ. ರೋಗಿಯ ನಾಡಿ ನೋಡು, ಜೀವ ಇದೆಯೋ ಇಲ್ವೋ ಹೇಳು- ಆಪರೇಷನ್ ಗೆ ದುಡ್ಡು ಕೀಳೋ ರಾಕ್ಷಸರು ಅಂತ ತೋರಿಸು, ಇತ್ಯಾದಿ. ಇವರದು ಹೀಗಾದ್ರೆ  ಇನ್ನ ಟಿ.ವಿ ಮಧ್ಯಮವಂತೂ ಒಂದು ಹೆಜ್ಜೆ ಮುಂದೆ ಹೋಗಿ ಪರಿಸ್ತಿತಿಯ ತಳ ಬುಡ ವಿಚಾರಿಸದೆ ಪ್ರಸಾರ ಮಾಡೋ ಒಂದೇ ಸುದ್ದಿ ಅಂದ್ರೆ-"ವೈದ್ಯರ ನಿರ್ಲಕ್ಷದಿಂದ ರೋಗಿ ಸಾವು, ಆಸ್ಪತ್ರೆ ಧ್ವಂಸ". ಅಲ್ಲದೆ ಆ ಕ್ಯಾಮರಾಮನ್ ಮಹಾಶಯ ಕಲ್ಲು ಹೊಡಿಯೋದನ್ನ ಅಥವಾ ಡಾಕ್ಟರ್ ಮೇಲೆ ಹಲ್ಲೆ ಮಾಡ್ತಿರೋ ವೀಡಿಯೊನ ಸ್ಪಷ್ಟವಾಗಿ ತೆಗಿತಿರ್ತಾನೆ. ಸ್ತಿಮಿತ ಇರೋ ಯಾರೇ ಆದರೂ ಅಲ್ಲಿ ಆ ಸಮಯದಲ್ಲಿ ಕಲ್ಲು ಹೊಡಿಯೋರಿಗೆ ಬುದ್ದಿ ಹೇಳ್ತಾರೆ ಅಥವಾ ಏನೂ ಮಾಡಾಕೆ ಆಗದೆ ಇದ್ರೆ ತಮ್ಮ ಪಾಡಿಗೆ ತಾವು ಇರ್ತಾರೆ. ಆದರೆ ಅದು ಬಿಟ್ಟು ಆ ಸನ್ನಿವೇಶಾನ ಕೇವಲ ಮಜಾ ಅಂತ ಭಾವಿಸಿ ಚಿತ್ರೀಕರಿಸೋ ಇಂತ ಮನಸ್ಸಿನವರಿಗೆ ಏನ್ ಹೇಳೋಣ?
ಇಲ್ಲಿ ನಾನು ಹೇಳೋಕೆ ಹೊರಟಿರೋ ಪ್ರಮುಖ ವಿಷಯ ಅಂದ್ರೆ-
*** ಒಬ್ಬ ರೋಗಿ ಒಬ್ಬ ವೈದ್ಯನ ಬಳಿ ಬಂದಿದ್ದಾನೆ ಅಂದ ಮೇಲೆ ಅಲ್ಲಿಗೆ ಆ ವೈದ್ಯನ ಮೇಲೆ ನಂಬಿಕೆ ಇಟ್ಟೇ ಬಂದಿರ್ತಾನೆ. ಅಂದ ಮೇಲೆ ವೈದ್ಯರಾದ ನಮಗೆ ಇದರ ಅರಿವು, ಜವಾಬ್ದಾರಿ ಮತ್ತು ನಂಬಿಕೆ ಉಳಿಸಿಕೊಬೇಕು ಅನ್ನೋದು ತಿಳಿದಿರತ್ತೆ ಅಲ್ಲವಾ?ಪ್ರತಿಯೊಬ್ಬ ವೈದ್ಯ ಕೂಡಾ ಯಾವುದೇ ರೋಗಿಯನ್ನಾದರೂ ನೋಡೋದು ತನ್ನ ಕರ್ತವ್ಯ ಅಂತಾನೆ ಭಾವಿಸ್ತಾನೆ ಹಾಗು  ನಿಭಾಯಿಸ್ತಾನೆ. ಅನಿವಾರ್ಯ ಪರಿಸ್ತಿತಿಯಲ್ಲಿ ಕೆಲವೊಂದು ಸಲ ಕೈ ಮೀರಿ ರೋಗಿಯ ಪ್ರಾಣ ಹೋದರೆ ಅದಕ್ಕೆ ಯಾವಾಗಲೂ ವೈದ್ಯ ಹೇಗೆ ಕಾರಣ ಆಗ್ತಾನೇ? 
ಸಾಮಾನ್ಯವಾಗಿ ಕೇಳಿ ಬರೋ ಮಾತು ಅಂದರೆ ವೈದ್ಯನ ನಿರ್ಲಕ್ಷದಿಂದಲೇ ಸಾವಗಿದೆ ಅಂತ. ಒಂದು ನಿಮಿಷ ನೀವೇ ಯೋಚನೆ ಮಾಡಿ ಹಾಗು ನಿಮಗೆ ನೀವೇ ಉತ್ತರನ ಕಂಡುಕೊಳ್ಳಿ.- "ಯಾವತ್ತಾದ್ರು ಯಾರನ್ನಾದರು ನೋಡಿಕೊಳ್ಳೋಕೆ ಒಂದು ರಾತ್ರಿ ನಿದ್ದೆ ಕೆಟ್ಟಿದ್ದೀರಾ?" ನಿಮ್ಮ ತಂದೆ-ತಾಯಿ-ಹೆಂಡತಿ-ಮಕ್ಕಳನ್ನ ಬಿಟ್ಟು ಬೇರೆಯವರನ್ನ ನೋಡ್ಕೊಳ್ಳೋಕೆ,ಯಾಕಂದ್ರೆ ಅವರನ್ನ ನೋಡಿಕೊಳ್ಳೋದು ನಮ್ಮಗಳ ಕರ್ತವ್ಯ ಅಥವಾ ಇನ್ನ ಕೆಲವರು ಅದನ್ನ ಕರ್ಮ ಅಂತಾನು ಭಾವಿಸುತ್ತಾರೆ. 
ಹೀಗಿರೋವಾಗ ಒಬ್ಬ ವೈದ್ಯನಿಗೆ ರೋಗಿ ಯಾವುದೇ ರೀತಿಲಿ ಸಂಬಂಧಿ ಅಲ್ಲ, ಸ್ನೇಹಿತ ಆಗಿರೋವ್ನಲ್ಲ, ಜೀವನಕ್ಕೆ ದಾರಿ ಮಾಡಿಕೊಡೋನಲ್ಲ- ಹಾಗಿದ್ರೂ ಅವ್ನು ರಾತ್ರಿ ಎಷ್ಟೇ ಹೊತ್ತಿಗೆ ಬರಲಿ, ಏನೇ ತೊಂದರೆ ಅಂತ ಹೇಳಲಿ, ವೈದ್ಯರುಗಳು ನಿದ್ದೆ ಕೆಟ್ಟು  ವಿಚಾರಿಸುತ್ತರಲ್ಲವೇ? ಎಷ್ಟೋ ರೋಗಿಗಳಿಗೋಸ್ಕರ ನಮ್ಮ ಕುಟುಂಬದೊಂದಿಗಿನ ಕೆಲವು ಸಮಾರಂಭಗಳನ್ನೂ ಬಿಟ್ಟು ಬರುತ್ತೆವಲ್ಲವೇ? ಹಾಸ್ಯ ಅನಿಸಿದರೂನು ನಿಜ ಅಂದರೆ ಎಷ್ಟೋ ಸಲ ಹೆಂಡತಿ ಜೊತೆ ಬೆಚ್ಚಗೆ ಮಲಗಿದ್ರೂನು ಎದ್ದು ಬಂದಿರುತ್ತಾರೆ!!! ಕುಡಿದು ಮೋಜು ಮಾಡಿ ಬಿದ್ದು ಬರೋ ಸತ್(?)ಪ್ರಜೆಗಳನ್ನ ನೋಡೋಕೆ ಅರ್ಧ ಮಾಡಿರೋ ಊಟ ಬಿಟ್ಟು ಬರ್ತಿವಿ. ದೈನಂದಿನ ಉದಾಹರಣೆನೆ ತಗೊಳ್ಳಿ- ಎಷ್ಟು ಸಲ ನಿಮ್ಮ ಮಧ್ಯಾನದ ನಿದ್ದೆ ಮಧ್ಯ ಒಬ್ಬ ಸ್ನೇಹಿತ ಫೋನ್ ಮಾಡಿ ಊರಿಗೆ ಬಂದಿದ್ದೀನಿ, ಬಸ್ ಸ್ಟ್ಯಾಂಡ್ ನಲ್ಲಿದ್ದೀನಿ ಅಂದಾಗ ಸುಳ್ಳೇ ಊರಲ್ಲಿ ಇಲ್ಲ ಅಂತ ಹೇಳಿಲ್ಲ? ಯಾರಾದರು ವೈದ್ಯ ಹಾಗೆ ಮಾಡಿದರೆ ಹೇಗಿರತ್ತೆ ಅನ್ನೋ ಕಲ್ಪನೆನೆ ಭಯಂಕರ ಅಲ್ವಾ?
ಇಂತ ಸಂಧರ್ಭಗಳನ್ನ ಪ್ರತಿ ದಿನ ನಾವುಗಳು ಎದುರಿಸುತ್ತೇವೆ ಮತ್ತು ಯಾರಿಗೂ ಕೂಡ ಅದು ಗೋಳು ಅಂತಲೋ ಅಥವಾ ನೋಡಿ ನಮಗೆ ಎಷ್ಟು ಕಷ್ಟ ಇದೆ ಅಂತನೋ ಹೇಳಿಕೊಳ್ಳೋದಿಲ್ಲ. ಯಾಕಂದರೆ ನಮಗೆ ರೋಗಿಯೊಬ್ಬ ಗುಣವಾಗಿ ಹೋಗೋವಾಗ 'ನಗು' ಚೆಲ್ಲುತ್ತಾನಲ್ಲ, ಅದು ಎಲ್ಲ 'ನಗದಿ'ಗಿಂತ ಹೆಚ್ಚಿನ ಧನ್ಯ ಭಾವ ಕೊಡುತ್ತೆ. ಇಲ್ಲೆಲ್ಲೂ ಕೂಡ ಜನರಿಗೆ ವೈದ್ಯರ ಲಕ್ಷ ಕಾಣಿಸೋಲ್ಲ, ಆದ್ರೆ ರೋಗಿ ಸತ್ತಾಗ ಮಾತ್ರ ಅದು ಹೇಗೆ ನಿರ್ಲಕ್ಷದಿಂದಲೇ ಸತ್ತದ್ದು ಅನ್ನೋ ನಿರ್ಣಯಕ್ಕೆ ಬಂದುಬಿಡುತ್ತಾರೆ ಜನ?
ಅಲ್ಲಾರೀ, ಕಾಣದೇ ಇರೋ ದೇವರಿಗೆ ಎಡೆ ಇಡ್ತೀವಿ, ಅವ್ನು ಏನೂ ಕೊಡಲಿಲ್ಲ ಅಂದ್ರುನು ದಿನ ಕೈ ಮುಗಿತಿವಿ, ಅದೇ ಒಬ್ಬ ವೈದ್ಯ ನಿಮ್ಮನ್ನ ಪರೀಕ್ಷೆ ಮಾಡೋಕೆ ಐದು ನಿಮಿಷ ತಡ ಮಾಡಿದ್ರೆ ಹಲ್ಲೆ ಮಾಡೋ ಮಟ್ಟಕ್ಕೆ ಹೋಗ್ತಿರ. ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ?
ಇಷ್ಟೆಲ್ಲಾ ಯಾಕೆ ಹೇಳಬೇಕಾಗಿ ಬಂದಿದೆ ಅಂದ್ರೆ ಇವತ್ತಿನ ಪರಿಸ್ತಿತಿಯಲ್ಲಿ ಒಬ್ಬ ವೈದ್ಯ ರೋಗಿಯನ್ನ ನೋಡೋದಕ್ಕೆ ಹೆದರಬೇಕಾದ ವಾತಾವರಣ ಇದೆ. ನಮಗೆ ಗೌರವ ಕೊಡೊ ಮಾತು ಹಾಗಿರಲಿ, ನಮ್ಮ ಮೇಲೆ ಹಲ್ಲೆ ಮಾಡದೆ ಇದ್ರೆ ಸಾಕಪ್ಪ ಇವತ್ತು ಅಂತ ಪ್ರತಿದಿನ ಎದ್ದು ಬರೋ ಎಷ್ಟೋ ವೈದ್ಯರಿದ್ದಾರೆ. ಇದಕ್ಕೆಲ್ಲ ಕಾರಣ ಅಂದ್ರೆ ನಮ್ಮ ಮಾಧ್ಯಮಗಳ ಬೇಜವಾಬ್ದಾರಿತನ ಹಾಗು ನಮ್ಮ ಜನರ ಅನಕ್ಷರತೆ. ಒಬ್ಬ ರೋಗಿಯ ರೋಗದ ತೀವ್ರತೆಯನ್ನ ವೈದ್ಯ ಮೊದಲೇ ತಿಳಿಸಿ ಹೇಳಿದ್ದರೂ ಕೂಡ, ವೈದ್ಯರ ಬಳಿ ಬಂದ ಮೇಲೆ ರೋಗಿ ಗುಣ ಆಗಲೇಬೇಕು ಅನ್ನೋ ವಿಚಿತ್ರ ಮನೋಭಾವ ಇದೆ ಜನರಲ್ಲಿ. ಇದು ಬದಲಾಗಬೇಕು ಮತ್ತು ಸತ್ಯವನ್ನ ಒಪ್ಪಿಕೊಳ್ಳೋ ಎದೆಗಾರಿಕೆ ನಮ್ಮ ಜನಗಳಿಗೆ ಬರಬೇಕು. ಇದನ್ನ ಸಾಧ್ಯವಾಗಿಸೋದರಲ್ಲಿ ತುಂಬಾ ಜನರಿಗೆ ಸುಲಭವಾಗಿ ತಲುಪೋ ಸಾಧನವಾದ ಮಾಧ್ಯಮಗಳು ಮಾಡಬೇಕು. ಆದರೆ ಈ ಮಾಧ್ಯಮಗಳದ್ದು "ಬೇಲಿಯೇ ಎದ್ದು ಹೊಲ ಮೇಯುವ ಚಾಳಿ ". ಇದು ಬದಲಾಗಬೇಕು.
ಏನೇ ಆದರು ನಾವು ನಮ್ಮ ಕೆಲಸನ ಮುಂದಿವರಿಸಲೇ ಬೇಕು ಹಾಗು ಮುಂದುವರಿಸುತ್ತೇವೆ ಕೂಡ.
ಮತ್ತೊಮ್ಮೆ ಬೆಟಿಯಾಗೊವರೆಗೂ.....

2 comments:

  1. Good article. I feel sorry for your situation. I strongly agree with you that people tend to give a sweeping stroke for almost everything without giving much thought! But a drop of a lemon is enough to spoil big container of milk isn’t it? Some bad doctors are really out there.
    This kind of mission-critical works are there in other sectors (odd hour calls/works etc), but have never faced problems like you as public interaction is less/none. Hmm so much to do for a living!

    - Niharika

    ReplyDelete
  2. Hey Niharika,
    I absolutely agree with you that there are lemon drops everywhere in our field and are spoiling our names relelntlessly. someone must come out boldly to show them right on their face what they deserve.
    About working at critical hours, it never is a problem, but imagine a situation wherein I will be woken up in my duty room at 3 in the morning to see a head injury case. I should wake up, regain my senses , examine the patient and even talk to attenders in full conscious coz one wrong slippage of a word will land me in trouble. So that alertness round the clock sometimes takes toll on our mental health. But we still are not supposed to lose our cool. Doctors you know:-) Prejudiced:-)
    Rakesh

    ReplyDelete