Showing posts with label ಕಿವಿಮಾತು. Show all posts
Showing posts with label ಕಿವಿಮಾತು. Show all posts

Thursday, April 21, 2011

ಕನ್ನಡದ ಪ್ರೇಕ್ಷಕನಾಗಿ ನಾನು ಡಬ್ಬಿಂಗ್ ವಿರೋಧಿಸುತ್ತೇನೆ!!!

ಕನ್ನಡ ಚಿತ್ರರಂಗದಲ್ಲಿ ಮತ್ತೆ ಡಬ್ಬಿಂಗ್ ವಿವಾದ ಶುರುವಾಗಿದೆ. ಡಬ್ಬಿಂಗ್ ಬೇಕಾ? ಬೇಡವಾ? ಅನ್ನೋ ಚರ್ಚೆ ಎಲ್ಲೆಲ್ಲು ನಡೀತಾ ಇದೆ.  ಡಬ್ಬಿಂಗ್ ಮಾಡೋದು ಎಷ್ಟು ಸರಿ-ತಪ್ಪು ಅನ್ನೋದನ್ನ ನಾನು ವಿಶ್ಲೇಷಣೆ ಮಾಡೋದು ಎಷ್ಟರ ಮಟ್ಟಿಗೆ ಸರಿ ಅನ್ನೋದೇ ಒಂದು ಜಿಜ್ಞಾಸೆ , ಯಾಕಂದ್ರೆ ಅದು ಪೂಜಾರಿನ ಹೋಗಿ ಯಾವ ತಳಿಯ ಕುರಿ ಮಾಂಸ ಚೆನ್ನಾಗಿರತ್ತೆ ಅಂತ ಕೇಳಿದಂಗೆ ಇರತ್ತೆ. ನನಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನೋದು ಕಟು ಸತ್ಯ, ಆದರೆ ಈ ನಾಡಿನ ಪ್ರಜೆಯಾಗಿ ನನ್ನ ಅನಿಸಿಕೆಗಳನ್ನ ಹೇಳೋದು ಒಳಿತು ಅನ್ನೋ ದೃಷ್ಟಿಯಿಂದ ಈ ಬ್ಲಾಗ್ ಬರಿತ ಇದ್ದೀನಿ.ನನ್ನ ಕೆಲವು ವಿಚಾರಗಳನ್ನ ನಾನು ಪಟ್ಟಿ ಮಾಡಿ ಹೇಳೋದಾದರೆ-
೧). ಚಲನಚಿತ್ರ ನಮಗೆ ಕೇವಲ ಮನರಂಜನೆಯ ಮಾಧ್ಯಮ, ಆದರೆ ಹಲವರಿಗೆ ಅದು ಉದ್ಯಮ, ಹೊಟ್ಟೆಪಾಡು. ಚಲನಚಿತ್ರಗಳ ನಿರ್ಮಾಣ ನಿಂತು ಹೋದರೆ ಎಷ್ಟೋ ಕುಟುಂಬಗಳು ಬೀದಿಗೆ ಬರೋದು ಖಾಯಂ( ನಿರ್ಮಾಪಕರು ಹಾಗು ನಟರನ್ನ ಬಿಟ್ಟು). ಹಾಗಾಗಿ ಇಂದು ಡಬ್ಬಿಂಗ್ ವಿರೋದಿಸುತ್ತಿರುವ ಚಲನಚಿತ್ರ ಕಾರ್ಮಿಕರು ಅವರ ಹಕ್ಕುಗಳಿಗೆ ಹೊರಾಡುತ್ತಿರೋದು  ತಪ್ಪಲ್ಲ ಅನ್ನಿಸುತ್ತೆ.
೨). ಡಬ್ಬಿಂಗ್ ಮಾಡಿದರೆ ನಾವು ಬೇರೆ ಭಾಷೆಯ ಒಳ್ಳೆ ಚಲನಚಿತ್ರಗಳನ್ನ ನಮ್ಮ ಭಾಷೆಯಲ್ಲಿ ನೋಡಿದಂಗೆ ಆಗುತ್ತೆ ಅನ್ನೋದು ಹಲವರ( ಕೆಲವರ) ವಾದ. ಆದರೆ ಕೇವಲ ಡಬ್ಬಿಂಗ್ ಮಾಡಿದರೆ ಮಾತ್ರ ಅವರ ಚಲನಚಿತ್ರಗಳನ್ನ ನೋಡಬೇಕೆ? ಅದನ್ನ ಅದರದೇ  ಭಾಷೆಯಲ್ಲಿ ನೋಡಬಹುದಲ್ಲವ?
೩). ಆಯ್ತು, ಎಷ್ಟೋ ಜನಕ್ಕೆ ಆ ಭಾಷೆ ಬರೋಲ್ಲ ಅಂತೀರಾ? ಬೇರೆ ಭಾಷೆಯ ಒಳ್ಳೆ ಚಲನಚಿತ್ರಗಳನ್ನ ನಮ್ಮ ಭಾಷೆಯಲ್ಲಿ ರೀಮೇಕ್ ಮಾಡಿ ಪ್ರದರ್ಶಿಸಿಲ್ಲವೇ? ಹಾಗೆ ಮಾಡೋಣ, ಮತ್ತೆ ಡಬ್ಬಿಂಗ್ ಏಕೆ ಬೇಕು?
೪). ಇನ್ನೂ ಒಂದು ವಾದ ಅಂದರೆ ಬೇರೆ ಭಾಷೆಯ, ಬಹುಕೋಟಿ ವೆಚ್ಚದ ಸಿನೆಮಾಗಳನ್ನ ನಮ್ಮ ಭಾಷೆಯಲ್ಲಿ ನಿರ್ಮಾಣ ಮಾಡೋದು ಸಾಧ್ಯನೇ ಇಲ್ಲ, ಹಾಗಾಗಿ ಅದನ್ನ ಡಬ್ಬಿಂಗ್ ಮೂಲಕವಾದರೂ ನೋಡೋಣ, ಅಂತಾನ? ಇಲ್ಲಿ ಸ್ವಲ್ಪ ದೀರ್ಘ ಪ್ರತಿವಾದವನ್ನ ಮಂಡಿಸುತ್ತ ಇದ್ದೇನೆ. ಹೋದ ವರ್ಷ ಆಂಗ್ಲ ಭಾಷೆಯ ಒಂದು ಚಲನಚಿತ್ರ ಬಿಡುಗಡೆಯಾಗಿತ್ತು- 2012  ಅನ್ನೋ ಚಲನಚಿತ್ರ. ಎಲ್ಲರು ಅದನ್ನ ಹೊಗಳುತ್ತಾ ಇದ್ದ ರೀತಿ ನೋಡಿ ಬಹಳ ನಿರೀಕ್ಷೆಯಿಂದ ನೋಡಲು ಹೋದರೆ ಅಲ್ಲಿ ಅದರ ಹಿಂದಿ ಡಬ್ಬಿಂಗ್ ಪ್ರದರ್ಶನ ಇತ್ತು. ಸರಿ, ಬಂದಿದ್ದು ಆಯಿತು ನೋಡೋಣ ಅಂತ ಹೋದೆ. ಆದರೆ ಅಲ್ಲಿ ನಿರಾಸೆ ಆಯಿತು ಅನ್ನೋದು ಕಟು ಸತ್ಯ. ಚಿತ್ರ ಚೆನ್ನಾಗಿರಲಿಲ್ಲ ಅಂತಲ್ಲ. ಆದರೆ ಆ ತಾಂತ್ರಿಕತೆ ಹಾಗು ಭಾವನೆಗಳನ್ನ ಒಬ್ಬ ಅಂಗ್ಲ ನಟ ಹಿಂದಿಯಲ್ಲಿ ವ್ಯಕ್ತ ಪಡಿಸುತ್ತಾ ಇದ್ದಾಗ ಹಾಸ್ಯಾಸ್ಪದ ಅನ್ನಿಸುತಿತ್ತು.  ಕೆಲವೊಮ್ಮೆ ಟಿ.ವಿ ಯಲ್ಲಿ ಬರುವ ಕಾರ್ಯಕ್ರಮದಲ್ಲಿ ಸ್ವಲ್ಪ ಏರುಪೇರಾಗಿ, ಶ್ರವಣಕ್ಕೂ ದೃಶ್ಯಕ್ಕೂ ಹೊಂದಾಣಿಕೆ ತಪ್ಪಿದಲ್ಲಿ ನೋಡುವ ನಮಗೆ (ನನಗಂತೂ) ಏನೋ ಆಭಾಸ ಅಥವಾ ಸಿಡುಕ ಉಂಟಾಗುತ್ತೆ ಹಾಗು ಆ ಕಾರ್ಯಕ್ರಮದ ಸವಿಯೇ ಹಾಳಾಗುತ್ತೆ. ಹೀಗಿರುವಾಗ ಆಂಗ್ಲ ನಟ ನಮ್ಮ ಭಾಷೆಯಲ್ಲಿ ಮಾತಾಡೋದನ್ನ ಊಹಿಸೋಕಗುತ್ತ? ಅದು ಚಲನಚಿತ್ರದ ಜೀವ ಸೆಲೆಯನ್ನೇ ಕಿತ್ತು ಎಸೆದಂತಾಗುವುದಿಲ್ಲವ? ಅಲ್ಲಿ ಹಾಸ್ಯ ಹೋಗಿ ಹಾಸ್ಯಾಸ್ಪದ ರಾರಾಜಿಸುತ್ತೆ. ಹಾಗಾಗಿ ಅಂತ ಉತ್ತಮ ಚಿತ್ರಗಳನ್ನ ಹಾಳು ಮಾಡೋ ಬದಲು ಅದರ ಮೂಲತನವನ್ನ ಗೌರವಿಸೋದು ಉತ್ತಮ ಅಲ್ಲವೇ?
೫).ಮಲಯಾಳಂ ಚಿತ್ರವನ್ನ ಕನ್ನಡದಲ್ಲಿ ಡಬ್ ಮಾಡಲಾಗಿದೆ ಅಂತಿಟ್ಟುಕೊಳ್ಳೋಣ, ಅದರಲ್ಲಿ ಅವರು ಆಚರಿಸುವ ಓಣಂ ಹಬ್ಬದ ದೃಶ್ಯ ನಮಗೆ ಏನು ಭಾವನೆಯನ್ನೇ ಉಕ್ಕಿಸೋದಿಲ್ಲ, ಬದಲಾಗಿ ಅದನ್ನೇ ಕನ್ನಡ ಭಾಷೆಯಲ್ಲಿ ಮತ್ತೆ ಚಿತ್ರೀಕರಿಸಿ ಆ ಹಬ್ಬದ ಬದಲಾಗಿ ನಮ್ಮ ಸೊಗಡಿನ ಮಾರಮ್ಮನ ಹಬ್ಬ ತೋರಿಸಿದರೆ ಅದರ ಮಜವೇ ಬೇರೆ ಇರತ್ತೆ. ನಿಮ್ಮ ಮನಸ್ಸಾಕ್ಷಿಯನ್ನ ಕೇಳಿ ಹೇಳಿ- ಹೌದೋ / ಇಲ್ಲವೋ?
೬).ಅದು ಅಲ್ಲದೆ ಇತ್ತೆಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದವರು ಚಲನಚಿತ್ರ ರಂಗಕ್ಕೆ ಇಳಿದು ಅರ್ಧ ಅಧ್ವಾನ ಮಾಡಿದ್ದಾರೆ, ಅಲ್ಲದೆ ಈಗ ಡಬ್ಬಿಂಗ್ ಗೆ ಅವಕಾಶ ಕೊಟ್ಟರೆ ಬರಿ ಅದನ್ನೇ ಮಾಡಿ ನಮ್ಮ ಚಲನಚಿತ್ರಗಳೇ ಇಲ್ಲದಂತಾಗುವುದು ಬೇಕಾ? ಅದಕ್ಕೆ ನೀವು ಸಮಜಾಯಿಷಿ ಹೇಳಬಹುದು, ಗಟ್ಟಿ ಚಲನಚಿತ್ರಗಳು ಉಳಿದೆ ಉಳಿದುಕೊಳ್ಳುತ್ತವೆ ಇಲ್ಲದವು ಇದ್ದರು ಇರದಿದ್ದಂತೆ ಅಂತ. ಇದಕ್ಕೆ ಸ್ವಲ್ಪ ಬೇರೆ ವ್ಯಾಖ್ಯಾನ ನೀಡುತ್ತ, ಅಲ್ಲ ರೀ, ಮನೆಯಲ್ಲಿ ಕೂತು ಊಟ ಮಾಡೋ ಪದ್ಧತಿ ಈಗ ಬಹಳನೇ ಕಡಿಮೆ ಆಗಿದೆ, ಅದಕ್ಕೆ ಕಾರಣ ಇದಿನ ಫಾಸ್ಟ್ ಫುಡ್ ಗಳು. ಈ ಫಾಸ್ಟ್ ಫುಡ್ ಗಳು ಮೊದಲಿಗೆ ತಲೆ ಎತ್ತಿದಾಗ ಕೆಲವರು ಆತಂಕ ವ್ಯಕ್ತ ಪಡಿಸಿದ್ದು ಉಂಟು. ಆದರೆ ವಿಪರ್ಯಾಸ ಅಂದ್ರೆ ಈಗ ಈ ಫಾಸ್ಟ್ ಫುಡ್ ನಮ್ಮ ದೈನಂದಿನ ಬದುಕಾಗಿದೆ. ಅದು ತಪ್ಪು ಅಂತ ಯಾರಿಗೂ ಈಗ ಅನ್ನಿಸದೆ ಇರಬಹುದು, ಆದರೆ ಇಡಿ ಮನೆಯವರೆಲ್ಲ ಕೂತು ಊಟ ಮಾಡಿದ್ದ ಅನುಭವ ಇದ್ದವರಿಗೆ ಹಾಗು ಇನ್ನೂ ಅದನ್ನ ಪಾಲಿಸಿಕೊಂಡು ಬರುತ್ತಿರುವವರಿಗೆ ಎಲ್ಲೋ ಒಂದು ರೀತಿಯ ನೋವು ಕಾಡುತ್ತಾ ಇರೋದಂತೂ ನಿಜ. ಹಾಗೇನೆ ಇಂದು  ಡಬ್ಬಿಂಗ್ ಚಿತ್ರಗಳು ಮಾಡಲು ಬಿಟ್ಟರೆ ಮುಂದೊಂದು ದಿನ ಇದೆ ರೀತಿ ನಮಗೆ ಅನ್ನಿಸಿದರೆ ( ಯಾಕಂದ್ರೆ ನೈಜ ಕನ್ನಡ ಚಲನಚಿತ್ರಗಳನ್ನ ಅನುಭವಿಸಿರೋ ಕೊನೆಯ ಕೊಂಡಿ ನಾವುಗಳೇ ಆಗಿರುತ್ತೇವೆ) ಅದು ಆಶ್ಚರ್ಯವೇನಲ್ಲ.
ಆದರೆ ಇಲ್ಲಿ ನನ್ನನ್ನ ನಿಜವಾಗಲು ಕಾಡುತ್ತ ಇರೋ ವಿಷಯ ಏನು ಅಂದರೆ, ಈ ಡಬ್ಬಿಂಗ್ ಬೇಕು ಅನ್ನೋ ಮಂದಿಯಲ್ಲಿ ,ಕನ್ನಡ ಅಂದರೆ ಏನು ಮಾಡೋಕು ಸಿದ್ದ ಅನ್ನೋ ಹಲವಾರು ಸ್ನೇಹಿತರೆ ಇರೋದು. ಎಲ್ಲೆಲು ಕನ್ನಡ ರಾರಜಿಸಬೇಕು ಅನ್ನೋದು ನಿಜ, ಆದರೆ ಅದು ನಮ್ಮ ಬುಡವನ್ನ ಕೊಚ್ಚಿ ಅದರ ಮೇಲೆ ನಮ್ಮದಲ್ಲದ ಕನ್ನಡದ ಸೊಬಗನ್ನ ತೋರಿಸೋದಾದರೆ ಅದು ನಮಗೆ ಬೇಕಾ?
ಕನ್ನಡದ ಪ್ರೇಕ್ಷಕನಾಗಿ ನಾನು ಡಬ್ಬಿಂಗ್ ವಿರೋಧಿಸುತ್ತೇನೆ!!!

Monday, March 14, 2011

ಬೆಳೆಸೋದಾ? ಬೆಳೆಯಲು ಬಿಡೋದಾ?

ಈಗ ಎಲ್ಲಿ ನೋಡಿದರೂನು "ಕ್ರಿಕೆಟ್ ಜ್ವರ". ನಮ್ಮ ಹಳ್ಳಿಯ ಪುಟ್ಟ ಹುಡುಗನಿಂದ ಹಿಡಿದು ಜಾತ್ರೆಯಲ್ಲಿ ದನ ಕೊಳ್ಳೋ ಹಾಗೆ ಕ್ರಿಕೆಟಿಗರನ್ನ ಕೊಂಡುಕೊಂಡಿರುವ ಮಲ್ಲ್ಯ ಸಾಹೇಬರ ಬಳಗದಂತಿರೋ ವ್ಯವಹಾರಸ್ತರ, ಇಷ್ಟು ದಿನ ಕಾಲಿ ಕೂತಿದ್ದ ಬುಕ್ಕಿಗಳ, ಪ್ರಸಾರ ಮಾಡೋಕೆ ಒಂದೂವರೆ ತಿಂಗಳಿನ ತನಕ ಸುದ್ದಿ ಸಿಕ್ಕಿದೆ ಅಂತ ಹಿರಿ ಹಿರಿ ಹಿಗ್ಗುತ್ತಾ ಇರೋ ಮಾಧ್ಯಮಗಳ, ತಮ್ಮ ಹೊಸ ಪ್ರಿಯಕರ/ಪ್ರೇಯಸಿಯೊಡನೆ "ಜಸ್ಟ್ ಫ್ರೆಂಡ್ಸ್" ಅಂತಾನೆ ಎಲ್ಲ ಕ್ರಿಕೆಟ್ ಮೈದಾನಗಳಲ್ಲೂ ಕಾಣಿಸಿಕೊಳ್ಳೋ ನಾಯಕ ನಾಯಕಿಯರುಗಳ, ಮಾಡೋಕೆ ಜನ್ಮಕ್ಕೆ ಆಗೋ ಅಷ್ಟು ಕೆಲಸ ಇದ್ದರೂ ಕೇವಲ ಒಂದು ಪಂದ್ಯದ ಟಿಕೆಟ್ ಸಿಗಲಿಲ್ಲ ಅನ್ನೋ ವಿಷಯ ವಿಧಾನ ಮಂಡಲದಲ್ಲಿ ಚರ್ಚೆ ಮಾಡಬೇಕು ಅಂತ ಗುಟುರು ಹಾಕೋ ನಾಲಾಯಕ್ ರಾಜಕಾರಣಿಗಳ.... 
ಹೀಗೆ ಹೇಳ್ತಾ ಹೋದ್ರೆ ಎಲ್ಲರನ್ನೂ ಸೇರಿಸ್ಕೊಂಡು ಹೇಳಬೇಕಾಗುತ್ತೆ. ಹಾಗಾಗಿ ಇಂತಿಪ್ಪ ಎಲ್ಲರ ಮೈಮನಗಳಲ್ಲಿ ಈಗ ಸುಳಿದಾಡುತ್ತ ಇರೋ ಒಂದೇ ಪ್ರಮುಖ ವಿಷಯ ಅಂದರೆ-"ಕ್ರಿಕೆಟ್".  ಸೋಜಿಗ ಅಂದರೆ, ಇವರುಗಳಲ್ಲಿ ಕನಿಷ್ಠ 80 % ಜನಕ್ಕೆ ಈ ಆಟದ ಬಗ್ಗೆ ಗಂಧಾನೆ ಇರೋಲ್ಲ. ಆದ್ರೂನು 'ಪಾಯಸ ಕೊಟ್ಟೋರ ಕಡೆಗೆ ಪಂಚಾಯತಿ ಮಾಡಿದ' ಅನ್ನೋ ಹಾಗೆ ತೋಚಿದ್ದು-ತೋಚದೆ ಇರೋದು ಎಲ್ಲಾನೂ ಮಾತಾಡ್ಕೊಂಡು ತಮಗೂ ಕ್ರಿಕೆಟ್ ಬಗ್ಗೆ ಏನೂ ಗೊತ್ತಿಲ್ಲ ಅನ್ನೋದನ್ನ ಜಗಜ್ಜಾಯಿರ ಮಾಡ್ಕೊಳ್ಳೋ ಮೂರ್ಖ ಶಿಖಾಮಣಿಗಳೇ ಹೆಚ್ಚು.
ಹೋಗ್ಲಿ ಬಿಡಿ, ನಮ್ಮ ದೇಶದ ಜನಕ್ಕೆ ಮಕ್ಕಳನ್ನ ಮಾಡೋ ವೃತ್ತಿಯಿಂದ ಸ್ವಲ್ಪ ಸಮಯ ವಿರಾಮ ಕೊಡೋದ್ರಲ್ಲಾದ್ರು ಈ ಕ್ರಿಕೆಟ್ ಸ್ವಲ್ಪ ಮಟ್ಟಿಗೆ ಯಶ ಕಂಡಿದೆ ಅಂತಲೇ ಭಾವಿಸಿಕೊಂಡು, ನಮ್ಮ ವಿಷಯಕ್ಕೆ ಬರೋಣ. 
ಹೌದು, ನಮ್ಮಲ್ಲಿ ಎಷ್ಟು ಜನಕ್ಕೆ ನಾನು ಈ ಕೆಳಗೆ ಪಟ್ಟಿ ಮಾಡೋ ಆಟಗಳ ಬಗ್ಗೆ ತಿಳಿದಿದೆ? " ಕುಂಟಾಬಿಲ್ಲೆ"- "ಚಿನ್ನಿ ದಾಂಡು"- "ಮರ ಕೋತಿ"- "ಲಗೋರಿ"- " ಟಿಕ್ಕಿ"- "ಎಂಟು ಮನೆ/ ಹದಿನಾರು ಮನೆ ಆಟ"- "ಗೋಲಿ"- "ಚಿಣಿಮಿಣಿ"- "ಉಪ್ಪು ಕೊಡೆ ಸಾಕಮ್ಮ" ???? ಹೇಳ್ತಾ ಹೋದ್ರೆ ಮುಗಿಯಲಾರದಷ್ಟು ದೊಡ್ಡ ಪಟ್ಟಿ ಇದೆ, ಅಲ್ಲದೆ ಇವು ಕೇವಲ ನನ್ನ ನೆನಪಿನಲ್ಲಿ ಇರೋ-ಅಥವಾ ನಾನು ಕೇಳಿರೋ ನಮ್ಮ ಹಳ್ಳಿ ಆಟಗಳು. ನಾನು ಕೇಳದೆ/ಆಡದೆ ಇರೋ ಸಾಕಷ್ಟು ನಮ್ಮ ಮಣ್ಣಿನ ಸೊಗಡಿನ ಆಟಗಳು ಅವೆಷ್ಟಿದೆಯೋ ನಾ ಕಾಣೆ. 
ಹುಟ್ಟೋ ಮಗು ಇನ್ನ ಅಂಬೆಗಾಲು ಇಡೋಕೆ ಶುರು ಮಾಡಿದ್ದೆ ತಡ ನಾವುಗಳು ಅದಕ್ಕೆ ಆಗ್ಲೇ ಕ್ರಿಕೆಟ್ ಬ್ಯಾಟ್, ಹಾರೋ ಹೆಲಿಕಾಪ್ತೆರ್ ತಂದು ಕೊಟ್ಟಿರ್ತಿವಿ. ಆದ್ರೆ ಈ ಮೇಲೆ ತಿಳಿಸಿದ ಆಟಗಳ ಬಗ್ಗೆ ಹೇಳಿಕೊಡೋದು ಇರಲಿ, ನಮ್ಮ ಹಳ್ಳಿ ಕಡೆನೇ ಅವರನ್ನ ಕಳಿಸೋಲ್ಲ ಅಲ್ಲವ? ಹಿಂದಿನ ಕಾಲದಲ್ಲಿ ಬೇಸಿಗೆ ರಜ ಬಂತು ಅಂದ್ರೆ, ಹಳ್ಳಿಲಿ ಇರೋ ಅಜ್ಜಿ ಮನೆಗೆ ಓಡಿ ಹೋಗೋ ಮಕ್ಕಳು ಎಲ್ಲಿ, ಈಗಿನ ಕಾಲದಲ್ಲಿ ಬೇಸಿಗೆ ರಜ ಬಂತು ಅಂದ್ರೆ ಡಾನ್ಸ್/ಸಿಂಗಿಂಗ್/ಕರಾಟೆ/ಡ್ರಾಯಿಂಗ್ ಕ್ಲಾಸಸ್ ಅಂತ ಸ್ಟೇಟಸ್ ತೋರ್ಪಡಿಸೋ ಹುಚ್ಚು ಆಡಂಬರಗಳು ಎಲ್ಲಿ?
ಅಲ್ಲದೆ ಮೇಲೆ ಹೇಳಿದ ಆಟಗಳು ಖರ್ಚನ್ನ ಕೂಡ ಬಯಸೋಲ್ಲ. "ಕುಂಟಾಬಿಲ್ಲೆ" ಆಡೋಕೆ ಚೆನ್ನಾಗಿ ಸವೆದಿರುವ ಕಲ್ಲಿಂದ ಸ್ವತಹ ಮಾಡಿದ ಒಂದು 'ಬಿಲ್ಲೆ' - ಅಂಗಳದಲ್ಲಿ ಒಂದಷ್ಟು ಜಾಗ ಇದ್ರೆ ಸಾಕು. ದಿನ ಪೂರ್ತಿ ಹೊತ್ತೇ ಹೋಗಿದ್ದು ತಿಳಿಯೋಲ್ಲ. ಇನ್ನ "ಟಿಕ್ಕಿ''ಗೆ ಉಪಯೋಗಿಸಿ ಬಿಸಾಡಿದ ಬೆಂಕಿ ಪೊಟ್ಟಣದ ಕವರ್ ಸಾಕು. ಒಂದು ಪೊಟ್ಟಣದಿಂದ ಎರಡು ಟಿಕ್ಕಿ ಸಿಕ್ಕಂಗಾಯ್ತು. ಹೀಗೆ 4 ಜನ ಹುಡುಗರು ಸೇರಿಕೊಂಡು ಆ ಟಿಕ್ಕಿಗಳ  ರಾಶಿಯನ್ನ, ಮಣ್ಣಿನಿಂದ ಮಾಡಿದ ಗುಡ್ಡೆ ಮೇಲೆ ನಿಲ್ಲಿಸಿ, ನಿಗದಿತ ದೂರದಿಂದ ಮತ್ತದೇ "ಬಚ್ಚ"( ಕಲ್ಲನ್ನ ಸವೆದು ಮಾಡಿಕೊಳ್ಳೋ ಒಂದು ಸಣ್ಣ ಬಿಲ್ಲೆ) ದಿಂದ ಬೀಸಿ ಹೊಡೆದರೆ, ಆ ಮಣ್ಣು ಗುಡ್ಡೆಯಿಂದ ಹಾರಿ ಹೊರ ಬೀಳೋ ಟಿಕ್ಕಿಗಳಿಗೆಲ್ಲ ಗುರಿ ಇಟ್ಟವನೆ ರಾಜ. ಆ ಬೆಲೆಯಿಲ್ಲದ ಟಿಕ್ಕಿಗಳನ್ನ ಗೆಲ್ಲೋದರಲ್ಲಿ ಇದ್ದ ಮಜವನ್ನ ಇವತ್ತಿನ ಯಾವುದೇ ಜೂಜಾಟಾನೂ ಕೂಡ ನಿಮಗೆ ಕೊಡೊದು ಸಾಧ್ಯಾನೆ ಇಲ್ಲ. ಈಗಿನ ದಿನದಲ್ಲಿ ಮಗು ಏನಾದ್ರು ಸ್ಕೂಲಲ್ಲಿ ಬಿದ್ದು ಗಾಯ ಮಾಡ್ಕೊಂಡ್ರೆ ಪ್ರಿನ್ಸಿಪಾಲ್ ಮೇಲೆ ಕೇಸ್ ಹಾಕೋ ಪೋಷಕರು, ನಾವುಗಳು ''ಮರ ಕೋತಿ" ಆಡೋವಾಗ ಬಿದ್ದದ್ದನೆಲ್ಲ ಲೆಕ್ಕ ಹಾಕೊಕು ಸುಸ್ತು ಹೊಡಿತಿದ್ರೆನೋ?
ತಮ್ಮ ಮಕ್ಕಳಿಗೆ ಇಂತ ಆಟ ಆಡಿ, ಇಂತದನ್ನ ಆಡಬೇಡಿ ಅಂತ ಹೇಳೋ ಅಧಿಕಾರ- ಹಕ್ಕು ಎಲ್ಲ ತಂದೆ ತಾಯಂದಿರಿಗುನು ಇದೆ, ಒಪ್ಕೊಳ್ಳೋಣ. ಆದ್ರೆ ಮಕ್ಕಳಿಗೆ ಆ ರೀತಿ ನಿರ್ಬಂಧ ಹಾಕೋವಾಗ ತಾವು ಸರಿ ಇದೇವೆ ಅನ್ನೋದು ಎಷ್ಟು ಮಂದಿಗೆ  ಗೊತ್ತಿರತ್ತೆ? ಹಾಗಂತ ನಮ್ಮ ಮಕ್ಕಳಿಗೆ ಮೇಲೆ ಹೇಳಿದ ಆಟಗಳನ್ನೇ ಆಡಿಸಿ ಅಂತ ಅಲ್ಲ. ಮಕ್ಕಳನ್ನ ಮಕ್ಕಳಾಗಿ ಇರೋಕೆ ಬಿಡಿ. 
ಸೂಕ್ಷ್ಮವಾಗಿ ಗಮನಿಸಿ ನೋಡಿದ್ರೆ, ಹಿಂದಿನ ಕಾಲದಲ್ಲಿ ಆಡ್ತಾ ಇದ್ದ ಆಟಗಳು ಕೇವಲ ಆಟಗಳಾಗಿರಲಿಲ್ಲ. ಅವು ಪ್ರಕೃತಿದತ್ತ ಪಾಠಗಳಾಗಿದ್ದವು. "ಕುಂಟಾಬಿಲ್ಲೆ"ಯ ಆಟ ಕುಂಟಿಕೊಂಡು ಆಡಬೇಕು. ಅದು ಕುಂಟಿದರುನು ಗುರಿ ಮುಟ್ಟು ಅನ್ನೋ ಸಂದೇಶ ಕಲಿಸಿದರೆ, "ಟಿಕ್ಕಿ" ಸಣ್ಣ ಪೊಟ್ಟಣ ಕೂಡ ಸಂತೋಷವನ್ನ ಕೊಡಬಲ್ಲದು ಅನ್ನೋದನ್ನ ಸೂಚಿಸುತ್ತಿತ್ತು. "ಮರಕೋತಿ" ಆಟ ಹಸಿರಿನೊಂದಿಗೆ ಬೇರೆಯೋ ಪರಿಪಾಟ ಬೆಳೆಸಿದರೆ, "ಹದಿನಾರು ಮನೆ, ಎಂಟು ಮನೆ ಆಟ" ಬುದ್ದಿಯ ತೀಕ್ಷ್ಣತೆ ಮತ್ತು ಸಂಧರ್ಬ್ಹೊಚಿತ ನಡೆಯನ್ನ ಕಲಿಸಿಕೊಡುತಿತ್ತು. ಈಗ ನೀವೇ ಹೇಳಿ, ಯಾವ ಜಾನಿ ಸಕ್ಕರೆ ತಿಂದ ಅನ್ನೋದು ತಿಳಿಯೋದು ಮುಖ್ಯಾನೋ ಅಥವಾ ನಿಮ್ಮ ಮಗು ಸಕ್ಕರೆಗು-ಉಪ್ಪಿಗೂ ವ್ಯತ್ಯಾಸ ತಿಳಿಯೋ ಬುದ್ದಿಮಟ್ಟ ಬೆಳೆಸಿಕೊಳ್ಳೋದು  ಮುಖ್ಯಾನೋ?
ಆದ್ದರಿಂದ, ಬೇಸಿಗೆ ರಜೆ ಓಡಿ ಬರ್ತಾ ಇದೆ. ನಿಮ್ಮ ಮಕ್ಕಳನ್ನ ಮನೆಯೋಳಗೋ, ಇಲ್ಲ ಮನೆಪಾಠಗಳಿಗೋ ದೂಡಿ ಅವರುಗಳನ್ನ ಗಿಳಿಗಳನ್ನಾಗಿ  ಮಾಡಬೇಡಿ. ಸ್ವಚ್ಚಂದವಾಗಿ ತಮಗೆ ಇಷ್ಟ ಬಂದಿದ್ದನ್ನ ಮಾಡೋಕೆ ಬಿಡಿ. ಮಕ್ಕಳನ್ನ ಅವ್ರಿಗೆ ಇಷ್ಟ ಆಗೋ ಹಾಗೆ ಬೆಳೆಸಿ. ನಮ್ಮ ಇಷ್ಟಕ್ಕೆ ತಕ್ಕಂತೆ ಅಲ್ಲ. ವರ್ಲ್ಡ್ ಕಪ್, ಐ.ಪಿ.ಎಲ್. ಇವೆಲ್ಲೇ ಇದ್ದೆ ಇರ್ತವೆ. ಸಿನಿಮಾಗಳು ಬರ್ತಾನೆ ಇರ್ತವೆ. ಅವುಗಳಿಗೆಲ್ಲ ರಜೆ ಹಾಕಿ, ರಜೆಯ ನಿಜವಾದ ಸವಿಯನ್ನ ಸವಿಯಿರಿ. ಪ್ರಕೃತಿಗಿಂತ ದೊಡ್ದವರಿಲ್ಲ. ಪ್ರಕೃತಿಯ ವಿರುದ್ದವಾಗಿ ಬದುಕೋದು ಬೇಡ. ನಮ್ಮ ಮಕ್ಕಳನ್ನ ಕೂಡ ಹಾಗೆ ಬೆಳೆಸೋದು ಬೇಡ!  ಬೆಳೆಸೋದಾ? ಬೆಳೆಯಲು ಬಿಡೋದಾ? ಅನ್ನೋ ಜಿಜ್ಞಾಸೆ ಬೇಡ. ಬೆಳಯಲು ಬಿಡಿ.